ಹರಿದ ಹಾಳೆ-೨



ನಯವಾಗಿ
ನಾಜೂಕಾಗಿ
ಕನಸುಗಳ ಮೇಲೆ
ಗೆರೆ ಎಳೆಯುವವರೇ
ಎಲ್ಲರೂ
ಬಚ್ಚಿಡಬೇಕವುಗಳನ್ನು
ಹೆಚ್ಚು ಕಾಣಿಸದಂತೆ
ಎಚ್ಚರಿರಬೇಕು
ಅವರಿವರ ಕನಸಿಗಾಗಿ
ನಿಮ್ಮವೇ
ಬಲಿಯಾಗುವವು
ದನಿ ಇರದ
ಮೂಕ
ಚೀತ್ಕಾರಗಳವು.
ಸ್ವಲ್ಪವೇ
ಕಿವಿ ಕೊಡಿ!
ಅವುಗಳಿಗೂ ಉಸಿರಿದೆ!
ಸಣ್ಣಗೆ ಮಿಡಿಯುವ
ಹೃದಯವಿದೆ.
ಸಿಡಿದೆದ್ದು ಗುಡುಗುವ
ಕಿಡಿಯೂ ಇದೆ
ಒಳಗೆಲ್ಲೋ
ಚಿಗುರಲಾರದ
ನೋವಿನ
ಭಾರವೂ ಇದೆ.
ಮೊಳೆಸಲಾರದು
ನಿಮ್ಮ ಕಣ್ಣೇರು
ಅವುಗಳನ್ನು
ತಣಿಸಿ ಹುದುಗಿಸುವ
ಮೊದಲೇ
ಮತೊಮ್ಮೆ
ಆಲಿಸಿ.
ಅವು
ನಮ್ಮವೇ!
ನಮ್ಮೊಳಗಿನವೇ!



15/10/2015


ಮುಖಗಳು


ನನ್ನೊಳಗೂ ಒಬ್ಬ
ಕುಂತಿ ಇದ್ದಾಳೆ.
ಸದಾ ಕುಟುಕುವ
ಅದೆಷ್ಟೋ ಗುಟ್ಟುಗಳನ್ನು 
ಬಚ್ಚಿಟ್ಟವಳು.
ವ್ಯಾಸರಿಂದ ಪುರುಷರ
ಮೇಲೆ
ನಂಬಿಕೆ ಕಳಕೊಂಡ
ಸತ್ಯವತಿ ಇದ್ದಾಳೆ;
ಅದೆಷ್ಟೋ ದುರಂತಗಳಿಗೆ 
ಸಾಕ್ಷಿಯಾಗುತ್ತಾ 
ಅಸಹಾಯಕಳಾಗೆ
ಉಳಿದವಳು.
ಅಂಬೆ ಇದ್ದಾಳೆ 
ಎಲ್ಲರೊಳಗೊಬ್ಬಳಾಗಿದ್ದೂ
ಯಾರವಳೂ ಆಗದವಳು.
ಕೊನೆವರೆಗೂ ಒಂಟಿಯಾಗೇ 
ಉಳಿದವಳು.
ದಿಟ್ಟೆ-ಅವಳು.
ಅವಳ ನೋವು-ಇದೆ.
ಬೇರೊಬ್ಬರ 
ಆಯ್ಕೆಯೊಳಗೇ 
ಬದುಕ ನವೆಸುವ
ಅಂಬಿಕೆ-ಅಂಬಾಲಿಕೆಯರ
ಆತ್ಮವಿದೆ.
ಅಸಹನೆಯಿಂದ
ತನ್ನನ್ನೇ ಹಿಂಸಿಸಿಕೊಂಡ
ಗಾಂಧಾರಿ,
ಹಂಚಿಹೋದ ದ್ರೌಪದಿಯ
ಗೋಳಾಟವಿದೆ.
ಅನ್ಯಾಯದಲ್ಲಿ 
ಬೆಂದ
ಆವಳಂಥವೇ ಗಾಯಗಳಿವೆ
ನನಗೆ
ಕರ್ಣರು ಹುಟ್ಟಲಿಲ್ಲ,
ಭೀಷ್ಮರನ್ನು ಕಾಣಲಿಲ್ಲ.
ಶಪಿಸುವ ಶಕ್ತಿ ಇಲ್ಲ
ಮತ್ತು 
ನಾನೈವರನ್ನು ವರಿಸಲಿಲ್ಲ.

ಆದರೆ
ಒಮ್ಮೊಮ್ಮೆ
ಅದ್ಯಾರದ್ದೋ 
ತಂಗಿಯಾಗಿ 
ಮತ್ಯಾರದ್ದೋ ಪ್ರೇಯಸಿಯಾಗಿ,
ಅವನ ಹೆಂಡತಿಯಾಗಿ,
ಅಪ್ಪನ ಮಗಳಾಗಿ
ಮಕ್ಕಳಿಗೆ ತಾಯಿಯಾಗಿ.
ನಾನು
ಅದೆಲ್ಲವೂ ಆಗುತ್ತೇನೆ
ಮತ್ತು
ಅದೆಲ್ಲವೂ 
ನನ್ನೊಳಗೇ
ನಡೆಯುತ್ತವೆ.

ಕಾಲ ಚಕ್ರದ 
ಸಾರಥಿ
ಕೃಷ್ಣ ಮಾತ್ರ
ನಗುತ್ತಾನೆ.


7/4/2015