ಕನವರಿಕೆ


ಅವತ್ತು ಹುಣ್ಣಿಮೆ.
ನಾನು ಗುಡ್ಡದ 
ಅಂಚೆಗೆ ಹೋಗಿದ್ದೆ.
ನೀಲಿ ಕತ್ತಲೆ,
ಹಟ್ಟಿಯ ಹಿಂದಿನ ದಾರಿ
ಕೇರಿಯ ಆಚೆಗಿನ ಲೋಕ
ಗುಡ್ಡದ ತುದಿಯ 
ಅಟ್ಟಣಿಗೆಯ
ಬೆಳದಿಂಗಳು.
ಕೆನೆ ಬಣ್ಣದ ಉರುಟು ಚಂದಿರ
ತಂಗಾಳಿಗೆ ಸ್ವಲ್ಪವೇ 
ಮಿಸುಕಾಡುವ
ಎಲೆಗಳ ಸದ್ದು.
ಕಣಿವೆಯ ತುಂಬಾ
ದೊಂದಿ ಬೆಳಕಿನ
ಬೀದಿಗಳು.
ರಾಶಿ ರಾಶಿ 
ಮಿಂಚು ಹುಳ.
ರಾತ್ರಿ ಹೆಚ್ಚಾದಂತೆ ಮೆಲ್ಲ ತೆರೆದುಕೊಂಡ
ಆ ಸುಂದರ ವಿಸ್ಮಯತೆ.
ಅಲ್ಲಿ ಅವನು
ಬಂದಿದ್ದ.
ಕೈಯಲ್ಲೊಂದು ಕೊಳಲು
ಹಿಡಿದು
ತಲೆಯ ಎಡಬದಿಗೆ
ಗರಿ ಸಿಕ್ಕಿಸಿ
ಗೊಲ್ಲರಂತೆ.
ಅಲ್ಲೇ ಕೂತಿದ್ದ.
ದಿಬ್ಬದ ಮೇಲೆ
ಬರಿಬೆನ್ನು ಹಾಕಿಕೊಂಡು,
ಮೊಗೆದು ಸುರಿವ
ನೀರವತೆಯಲ್ಲಿ 
ನಾನು ಮೊಗ್ಗರಳಿ
ಹೂವಾಗಿದ್ದೆ.
ಅಲ್ಲೆಲ್ಲೋ ನನ್ನ
ಕೃಷ್ಣ ಸಿಕ್ಕಿದ್ದ.



27/04/2014


No comments:

Post a Comment